Monday 28 March 2016

ಸಪ್ತಸಾಗರದಾಚೆಯೆಲ್ಲೋ....

ತನ್ನವರೆನ್ನುವವರು ಯಾರೂ ಇಲ್ಲದ ಅಪರಿಚಿತ ಅಮೇರಿಕಾಗೆ ಪ್ರಕೃತಿ ಬಂದು ಐದು ವರ್ಷ... ಅವಳ ಮನಸೆಲ್ಲಾ ಖಾಲಿ ಖಾಲಿಯಾಗಿತ್ತು. ಮುಸ್ಸಂಜೆಯಲಿ ರವಿ ಶಶಿಯಾಗಮನಕ್ಕಾಗಿ ಹಾದಿ ತೆರವುಗೊಳಿಸುತ್ತಾ ನೆರಳ ತರಿಸುತಲಿದ್ದ. ರವಿಯ ಹೊಂಬಣ್ಣದ ಕಿರಣಗಳು ಸಾಗರವನ್ನು ತೋಯಿಸುತ್ತಿರುವುದನ್ನು ಕಿಟಕಿಯಿಂದಲೇ ನೋಡುತ್ತಿದ್ದ ಪ್ರಕೃತಿ ಮೌನಿಯಾದಳು.. 
ಪ್ರಕೃತಿ ಹೆಸರಿಗೆ ತಕ್ಕಂತೆ ಪ್ರಕೃತಿ ಪ್ರೇಮಿ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಮಲೆನಾಡಿನ ಸುಂದರ ಪ್ರಕೃತಿಯ ಒಂದು ಪುಟ್ಟ ಹಳ್ಳಿಯಲ್ಲಿ ಡಾಕ್ಟರ್ ಆಗಿ ಅಲ್ಲಿ ಜನರ ಕ್ಷೇಮ ನೋಡಿಕೊಂಡು ಹಚ್ಚ ಹಸುರಿನ ಮಧ್ಯೆ ಗುಲಾಬಿಯಂತೆ ಕಂಗೊಳಿಸಬೇಕಿತ್ತು...

ಪ್ರಕೃತಿಗೆ ಚಿಕ್ಕಂದಿನಿಂದಲೂ ಡಾಕ್ಟರ್ ಆಗಿ ಅವರ ಹಳ್ಳಿಯಲ್ಲಿ ಇಲ್ಲದಿರುವ ವೈದ್ಯಕೀಯ ಸೌಲಭ್ಯವನ್ನು ತಾನೇ ನೀಗಿಸಬೇಕೆಂಬ ಆಸೆ.. ಜಿಟಿಪಿಟಿ ಸೋನೆ ಮಳೆ ಬಂತೆಂದರೆ ಸಾಕು ಮನೆಯಲ್ಲಿ ಕಾಲೇ ನಿಲ್ಲುತ್ತಿರಲಿಲ್ಲ. ಪ್ರಕೃತಿಯ ಪ್ರತಿಯೊಂದು ಆಗುಹೋಗುಗಳಿಗೂ ಪ್ರತಿಕ್ರಿಯಿಸುವ ಸಂವೇದನಶೀಲೆ.. ಅವಳ ಯಾವುದೇ ಆಸೆಗೂ ಅಡ್ಡಿ ಬರದೆ ಅವಳಿಷ್ಟದಂತೆ ಎಲ್ಲವನ್ನೂ ಬೆಂಬಲಿಸುವ ಅಪ್ಪ-ಅಮ್ಮ..

ಹಳ್ಳಿಯಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಪಟ್ಟ ಕಾಲೇಜು ಇಲ್ಲದ ಕಾರಣ ಅನಿವಾರ್ಯವಾಗಿ ಪ್ರಕೃತಿ ಬೆಂಗಳೂರಿಗೆ ಬಂದಳು. ಅಪ್ಪ-ಅಮ್ಮನ ಮುದ್ದಿನ ಕೂಸಾಗಿ ಹಕ್ಕಿಯಂತೆ ಸ್ವಚ್ಛಂದವಾಗಿ ಬದುಕಿದ ಪ್ರಕೃತಿಗೆ ಬೆಂಗಳೂರಿಗೆ ಒಗ್ಗಿಕೊಒಗ್ಗಿಕೊಳ್ಳುವುದು ಕಷ್ಟವಾಗಿತ್ತು. ಪರಿಚಯವಿಲ್ಲದ ಊರು ತರುವ ಒಂಟಿತನ, ಇಂಗ್ಲೀಷ್ ಮಾಧ್ಯಮಕ್ಕೆ ಹೊಂದಿಕೊಳ್ಳುವ ಕಷ್ಟ ಇದಕ್ಕೆಲ್ಲ ಜೊತೆಯಾಗಿದ್ದು ಆಕಸ್ಮಿಕವಾಗಿ ಪರಿಚಯವಾದ ರವಿ... ಪರಿಚಯ ಸ್ನೇಹವಾಗಲು, ಸ್ನೇಹ ಪ್ರೀತಿಯಾಗಲು ಹೆಚ್ಚೇನು ದಿನ ಬೇಕಾಗಲಿಲ್ಲ.. ಇಬ್ಬರ ಮನೆಯಲ್ಲೂ ತಿಳಸಿ ಎಲ್ಲರ ಒಪ್ಪಿಗೆಯೊಂದಿಗೆ ಮದುವೆಯೂ ಕೂಡ ಕಣ್ರೆಪ್ಪೆ ಮುಚ್ಚಿ ತೆಗೆಯುವುದರೊಳಗೆ ಮುಗಿದೇಹೋಗಿತ್ತು. ಪ್ರಕೃತಿಯ ವಿದ್ಯಾಭ್ಯಾಸವೂ ಅಪೂರ್ಣವಾಯಿತು...

ಅಷ್ಟರಲ್ಲಿ ಅಮೇರಿಕಾದ ಪ್ರತಿಷ್ಠಿತ ಕಂಪನಿಯ ಮಾಲಿಕನಾದ ರವಿಯ ತಂದೆ ಹೃದಯಾಘಾತವಾಗಿ ಮರಣಹೊಂದಿದ್ದರಿಂದ ಎಲ್ಲಾ ಜವಾಬ್ದಾರಿಯೂ ರವಿಯ ಹೆಗಲಿಗೇ ಬಿತ್ತು. ರವಿಯ ಪ್ರೀತಿಯ ಮಳೆಯಲ್ಲಿ ನೆನೆಯುತ್ತಿದ್ದವಳಿಗೆ ತನ್ನಾಸೆ, ಕನಸುಗಳ ಪರಿವೇ ಇದ್ದಂತಿರಲಿಲ್ಲ. ರವಿಯಲ್ಲಿಯೇ ತನ್ನ ಖುಶಿ ಕಾಣುತ್ತಿದ್ದವಳು ತನ್ನಾಸೆ ಕನಸನ್ನ ಅಡಿಗೆ ಹಾಕಿ ರವಿಯೊಂದಿಗೆ ಅಮೇರಿಕಾಗೆ ಹಾರಿದಳು..
ಎಲ್ಲವೂ ಚೆನ್ನಾಗೇ ಇತ್ತು... ಬಯಸಿ ಬಯಸಿ ಪಡೆದ ಪ್ರೀತಿಯ ಇನಿಯನ ಸಾನಿಧ್ಯ, ಹೊಸ ಊರು, ಹೊಸ ಜಾಗ. ಬರುಬರುತ್ತಾ ರವಿ ಕೆಲಸದಲ್ಲಿ ತೊಡಗಿದಾಗ ಒಂಟಿತನ, ಅಸಹನೀಯತೆ ಭುಗಿಲೇಳಲಾರಂಭಿಸಿತು. ಮುದುಡಿಹೋಗಿದ್ದ ಆಸೆ, ಕನಸುಗಳೆಲ್ಲ ಪ್ರಕೃತಿಯ ಮನದಲ್ಲೇ ಅರಳಲಾರಂಭಿಸಿತ್ತು. ಆದರೆ ಅದನ್ನು ಹೊಸಕಿ ಹಾಕುತ್ತಲೇ ಕಾಲ ಕಳೆದಿದ್ದಳು..

ಕಿಟಕಿಯೀಚೆಗೆ ಕುಳಿತು ರವಿ ಮರೆಯಾಗುವುದನ್ನೇ ನೋಡುತ್ತಿದ್ದ ಪ್ರಕೃತಿಯ ಮೌನವಾಗಿದ್ದ ಮನದಲ್ಲಿ ಸಾವಿರಾರು ಪ್ರಶ್ನೆಗಳ ಸರಮಾಲೆಗಳ ಮೆರವಣಿಗೆಯಾಗತೊಡಗಿತ್ತು. ಈ ಐದು ವರ್ಷಗಳ ದೀರ್ಘಾವಧಿಯಲ್ಲಿ ನಾನು ಸಾಧಿಸಿದ್ದಾದರೂ ಏನು ? ರವಿಯ ಪ್ರೀತಿಯಿಂದಲೂ ನನ್ನ ಕನಸನ್ನು ಮರೆಸಲು ಆಗಿಲ್ಲವೇಕೆ ? ನನ್ನೆಲ್ಲಾ ಆಸೆ ಕನಸುಗಳು ಮೊಗ್ಗಾಗಿದ್ದಾಗಲೇ ಕಮರಿ ಹೋಗಿದ್ದೇಕೆ ? 
ಇಲ್ಲ.... ಇದಕ್ಕೆಲ್ಲ ಒಂದು ಅಂತ್ಯ ಹುಡುಕಲೇಬೇಕೆಂದು ಮನ ನಿರ್ಧರಿಸಿಬಿಟ್ಟಿತ್ತು. ಹುಟ್ಟಿದ ಮನೆ, ಪರಿಸರ, ಜೀವನದ ಆಸೆ, ಆಕಾಂಕ್ಷೆ ಕೈ ಬೀಸಿ ಕರೆಯತೊಡಗಿತ್ತು.....
ತನ್ನ ಮನದಾಳದ ಮಾತುಗಳನ್ನು ರವಿಯ ಜೊತೆ ಹೇಳಲೇಬೇಕೇಂದು ರೂಮಿನಿಂದ ಹೊರಹೋಗಲು ಹೆಜ್ಜೆ ಹಾಕಿದಳು....
ತನ್ನ ಇನಿಯೆಯಾಗಮನಕ್ಕಾಗಿ ಹಾದಿ ತೆರವುಗೊಳಿಸುತ್ತಿದ್ದ ರವಿ ಹೊಂಬಣ್ಣದಿಂದ ಮಿನುಗುತ್ತಿದ್ದ ರೂಮನ್ನು ಕರಿಯ ನೆರಳಲಿ ಮೀಯುವಂತೆ ಮಾಡಿ ಮರೆಯಾದ...
ಅದೇ ಕ್ಷಣ ಪ್ರಕೃತಿಯ ಫೋನು ರಿಂಗಣಿಸುತ್ತಿತ್ತು....
 "ಸಪ್ತ ಸಾಗರದಾಚೆಯೆಲ್ಲೋ


   ಸುಪ್ತ ಸಾಗರ ಕಾದಿದೆ....!!!"

Thursday 24 March 2016

ಕವಿತೆ


ಕವಿತೆ

ನಾನು ನೆನಪುಗಳ ಪೋಣಿಸಿ 
ಕಡಲ ತೀರದಲ್ಲಿ ಗೀಚಿದ 
ಕವಿತೆಯ ನೀ ನೋಡದೇ 
ನನ್ನಿಂದ ದೂರಾಗಿ ಸಂವತ್ಸರವೇ
ಕಳೆದುಹೋದರೂ ಕವಿತೆ ಮಾತ್ರ
ಹಾಗೆಯೇ ಇದೆಯಲ್ಲ ಗೆಳೆಯಾ.....

ಪ್ರೀತಿಯ ರಂಗು



ಭಾವನೆಗಳ ನುಗ್ಗಾಟದಲ್ಲಿ ನೆಲಸೇರಿರುವ
ತರತರಹದ ಕುಂಚಗಳನು ಹೆಕ್ಕಿ ತಂದು
ರಂಗುರಂಗಿನ ಬಣ್ಣವ ತುಂಬಿ
ಮನದಲಿ ಚಿತ್ರವೊಂದನು ಬಿಡಿಸಬೇಕಿದೆ

ನನ್ನ ನಿನ್ನ ನಡುವೆ ಆಡದೇ
ಉಳಿದುಹೋದ ಮಾತುಗಳೆಲ್ಲಾ
ಒಂದಾಗಿ ಸೇರಿ ಮನದಲಿ
ಮೂಡುವ ಚಿತ್ರಕ್ಕೆ ಬಣ್ಣಬಣ್ಣದ
ಕಾರಂಜಿಯನೇ ಸುರಿಸಬೇಕಿದೆ

ನಿನ್ನ ಕಣ್ಣಿಂದ ಹೊಮ್ಮುವ
ಕನಸುಗಳಿಗೆ ನಾ ಬಣ್ಣವಾಗಿ
ಕನಸ ನೋಟದ ಅನುಭಾವಕೆ
ಕನಲಿ ಹೋಗಬೇಕಿದೆ

ಮನದ ಜಾಲಿಕೆಯಲ್ಲಿ ನಿನ್ನ
ಪ್ರೀತಿಯೆಂಬ ರಂಗುರಂಗಿನ
ಸಾವಿರ ಬಣ್ಣಗಳು ಮಿಂದೆದ್ದು
ಎಂದೂ ಮಾಸಿಹೋಗದ ಚಿತ್ರವಾಗಬೇಕಿದೆ....

ಮೋಹಕ ತಂಗಾಳಿಯಲಿ



ಮುಸ್ಸಂಜೆ ಮಬ್ಬಲ್ಲಿ ಇನಿಯನ
ಆಗಮನದ ನಿರೀಕ್ಷೆಯಲ್ಲಿರುವ
ಸಾಗರದ ಅಂಚಲಿ ಕುಳಿತು
ಮನಸೆಂಬ ಪುಸ್ತಕದಲ್ಲಿ ಬರೀ
ನಿನ್ನದೇ ಕವಿತೆ ಬರೆಯಬೇಕಿದೆ

ಮೋಹಕ ತಂಗಾಳಿಯಲಿ
ನೀಲನಭದಿ ಶಶಿಯು ಮೂಡಿ
ಸಾಗರದ ಅಂಚನ್ನು ಚುಂಬಿಸಲು
ನಿನ್ನ ಪ್ರೀತಿಯೆಂಬ ತಂತಿ ಮೀಟಿ
ಹೊಸ ರಾಗ ಹೊಮ್ಮಬೇಕಿದೆ

ಬೆಳದಿಂಗಳ ರಾತ್ರಿಯಲಿ ನಕ್ಷತ್ರಗಳು
ಮಿನುಗುತಿರುವಾಗ ಜಂಟಿಯಾಗಿ ಕೂತು
ಕೈಯೊಳಗೆ ಕೈ ಪೋಣಿಸಿ ಬೇಲಿ
ಹೆಣೆದು ಬೆರಳುಗಳ ಮಧ್ಯದ
ಖಾಲಿತನವನ್ನು ನೀ ತುಂಬಬೇಕಿದೆ

ಆಕಾಶದ ನೀಲಿಮೆಯಲ್ಲಿ ಮೂಡಿರುವ
ನಕ್ಷತ್ರಗಳನು ಬಳಸಿ ನನ್ನ ಕನಸಿಗೆ
ಜೀವ ತುಂಬಿ, ಭವಿತ್ಯದ
ಕವಲಿನಲ್ಲಿ ಮೂಡುವ ನಿನ್ನ
ಕನಸುಗಳಿಗೆ ಚಂದಾದಾರಳಾಗಬೇಕಿದೆ...

Friday 18 March 2016

ನಿಜವಾಗಲೂ ಸಂತೋಷ ಯಾವುದು?

                  ನಿಜವಾಗಲು ಸಂತೋಷ ಯಾವುದು?

             

ನಿಜವಾಗಲೂ ಸಂತೋಷ ಯಾವುದು ? ಬದುಕು ಒಂದು ರೀತಿಯ ಪಯಣ. ಈ ಪಯಣದಲ್ಲಿ ಬರುವ ತಿರುವುಗಳೇ ವಿಚಿತ್ರ. ನಮ್ಮ ಬದುಕಿನಲ್ಲಿ ಕೇವಲ ಗುರಿ ತಲುಪುವತ್ತಲೇ ದೃಷ್ಠಿ ಹರಿಸುವ ನಾವು ಸಣ್ಣ-ಪುಟ್ಟ ಸಂತೋಷದ ಕ್ಷಣಗಳನ್ನು ಅನುಭವಿಸುವತ್ತ ಗಮನ ಹರಿಸುವುದಿಲ್ಲವೇಕೆ?

ನಿಜ  ಏನೆಂದರೆ ಅಂಥ ಕ್ಷಣಗಳಲ್ಲೇ ನಿಜವಾದ ಸಂತೋಷ ಅಡಗಿರುತ್ತದೆ. 

 ಜೀವನ ಎಷ್ಟೇ ಕಷ್ಟ ಕೊಟ್ಟರೂ ಮಧ್ಯ ಮಧ್ಯದಲ್ಲಿ ಸಣ್ಣಪುಟ್ಟ ಸಿಹಿ ಕ್ಷಣಗಳನ್ನು ಕೊಡುತ್ತಲೇ ಇರುತ್ತದೆ. ಈ ತರಹದ ಸನ್ನಿವೇಶಗಳೇ ಬಹಳ ಸಲ ನಿರುತ್ಸಾಹದ ಮನಸುಗಳಿಗೆ ಚೈತನ್ಯದ ಚಿಲುಮೆಯನ್ನು ನೀಡುತ್ತದೆ. ಆದರೆ ಅದನ್ನು ಸ್ವೀಕರಿಸಿ ಅನುಭವಿಸುವ ಮನಸಿರಬೇಕಷ್ಟೇ.. 

ಗುರಿ ಮುಟ್ಟುವತ್ತಲೇ ಸದಾ ದೃಷ್ಠಿ ಹರಿಸಿದರೆ ಎಲ್ಲದರಲ್ಲೂ ಏಕತಾನತೆಯನ್ನು ಉಂಟು ಮಾಡುತ್ತದೆ.  ಯಾವಾಗಲಾದರೂ ನಡುನಡುವೆ ಬಂಧು ಬಾಂಧವರು, ಸ್ನೇಹಿತರು, ಮನೆಯವರೊಂದಿಗೆ ಒತ್ತಡ ತಂದುಕೊಳ್ಳದೇ ನಿರಾಳ ಮನಸ್ಸಿನಿಂದ ಕಾಲ ಕಳೆದರೆ ಸನ್ನಿವೇಶದ ಬದಲಾವಣೆಯಾದಂತೆ ಬೇರೆಯದೇ ಅನುಭವ ನೀಡುತ್ತದೆ. 

ಎಲ್ಲರೊಡನೆ ಬೇರೆಯದಿದ್ದರೆ ಎಲ್ಲರ ಮೂದಲಿಕೆಗೆ ಎದುರಾಗುವ ಸಂದರ್ಭ ಎದುರಿಸಬೇಕಾಗಬಹುದು. ಗುರಿ ತಲುಪುವ ಭರದಲ್ಲಿ ಎಲ್ಲವನ್ನು ದೂರವಿಟ್ಟರೆ ಮುಂದೊಂದು ದಿನ ಎಲ್ಲರು ಇದ್ದೂ ಕೂಡ ಒಂಟಿಯಾಗಿಯೇ ಬಾಳಬೇಕಾಗುವಂತ ಏಕತಾನತೆಯ ವಾತಾವರಣವೂ ಸೃಷ್ಟಿಯಾಗಬಹುದು. ಇರುವಾಗ ಸಂತೋಷದಿಂದ ಕಳೆಯದಿದ್ದರೆ ಮುಂದೆ ಅಥವಾ ಆ ವಸ್ತು ಬೇಕೆಂದಾಗ ಸಿಗುವುದಿಲ್ಲ.  

ಗುರಿ ಸಾಧನೆಗಾಗಿ ಸಣ್ಣ  ಪುಟ್ಟ ಸಂತೋಷದ ಕ್ಷಣಗಳನ್ನು ತ್ಯಾಗ ಮಾಡಬೇಕು ಎಂದಾಗಲಿ, ಅನುಭವಿಸಲೇ ಬಾರದು ಎಂಬ ನಿಯಮವೇನೂ ಇಲ್ಲವಲ್ಲ ? ಜೀವನದಲ್ಲಿ ಸಂತೋಷವನ್ನು ಹುಡುಕಿಕೊಂಡು ಅನುಭವಿಸಬೇಕಾದ ಜವಾಬ್ದಾರಿ ನಮ್ಮದೇ. "ಪ್ರತಿಯೊಂದರಲ್ಲೂ ಸಂತೋಷ ಇರುತ್ತದೆ. ಆದರೆ ಅದನ್ನು ಹುಡುಕಿ ಸಂತೋಷವನ್ನು ಅನುಭವಿಸುವ ಅಭಿರುಚಿ ಮತ್ತು ಮನೋಭಾವನೆ ನಮ್ಮಲ್ಲಿ ಕೂಡಿಸಿಕೊಳ್ಳಬೇಕು". 

ಮನುಷ್ಯನಾದವನಿಗೆ ಗುರಿ ಎನ್ನುವುದೊಂದು ಇರಲೇಬೇಕು. ಆದರೆ ಈ ಗುರಿಯಿಂದ ತನಗೂ, ಉಳಿದ ಮಾನವ ಕುಲಕ್ಕೂ ಸ್ವಲ್ಪ ಮಟ್ಟಿಗಾದರೂ ಸಹಾಯವಾಗಬೇಕು. ಸ್ವಹಿತಕ್ಕಾಗಿ ಪರಹಿತವನ್ನು ಹಾಳುಗೆಡುವ ಸಾಧನೆ ಸಾಧನೆಯೇ ಅಲ್ಲ. 

ಅದರಲ್ಲು ಮುಖ್ಯವಾಗಿ, ಕಂಡದ್ದೆಲ್ಲ ತನ್ನದಗಬೇಕೆಂಬ ದಾಹವೇ ಜೀವನದ ಸಂತೋಷದ ಕ್ಷಣಗಳನ್ನು ಅನುಬವಿಸಲು ಮುಳ್ಳಾಗಿರುವುದು. 

ಜೀವನವಿಡೀ ಸುಖ - ಸಂತೋಷ, ಯಶಸ್ಸು, ಪ್ರೀತಿ, ಐಶ್ವರ್ಯ, ಕೊಡು ಎಂದು ದೇವರಲ್ಲಿ ಬೇಡಿಕೊಳ್ಳುವ ನಾವು, ಬದುಕು ಎನ್ನುವಂತದ್ದು, ಸುಖ-ದು:ಖ, ನೋವು-ನಲಿವು, ಶಾಂತಿ-ಅಶಾಂತಿ ಎಲ್ಲವನ್ನು ಅರಗಿಸಿಕೊಂಡು ನಡೆಯುವಂತದ್ದು ಎಂಬ ಕಹಿ ಸತ್ಯವನ್ನು ಮರೆತುಬಿಟ್ಟ೦ತಿದೆ. 

ಸಂತೋಷ ಬಂದಾಗ ಹಿರಿ ಹಿರಿ ಹಿಗ್ಗಿ ಕುಣಿದು ಕುಪ್ಪಳಿಸುವ ನಾವು ಕಷ್ಟ ಬಂದಾಗ ಬೆನ್ನು ತೋರಿಸಿ ಓಡಿ ಹೋಗುವುದೇಕೆ ? ಗೊತ್ತಿಲ್ಲ.. ಆದರೂ ನಾವು ಬದುಕುವುದು ಮಾತ್ರ ಹಾಗೆಯೇ. ಬದುಕು ನಮಗೆ ಎರಡನ್ನು ಕಲ್ಪಿಸಿ ಕೊಡುತ್ತದೆ. ಆದರೆ ಕಷ್ಟವನ್ನು ಮಾತ್ರ ಸಹಿಸಲೊಲ್ಲೆವು. 

ಕಷ್ಟ ನಷ್ಟಗಳನ್ನು ಸಹಿಸಿಕೊಂಡು ಸಹಬಾಳ್ವೆ ನಡೆಸಲು ಬೇವು ಬೆಲ್ಲ ಹಬ್ಬ, ಎಳ್ಳು ಬೆಲ್ಲದ ಹಬ್ಬ, ಮನೋವಿಕಾರ ಸುಡುವ ಕಾಮದಾಹನ, ಮನದ ಅ೦ಧಕಾರ ಹೋಗಲಾಡಿಸಲು ದೀಪಾವಳಿ, ಹೀಗೆ ಸಾಲುಸಾಲಾಗಿ ಬರುವ ಹಬ್ಬಗಳನ್ನು ಸುಮ್ಮನೆ ಆಚರಿಸಿದರೆ ಮುಗಿಯಿತೇ ? 

ಹಬ್ಬಗಳ ಅರ್ಥಗಳನ್ನು ಮನದಟ್ಟು ಮಾಡಿಕೊಂಡು, ಜೀವನದಲ್ಲಿ ಸುಖ ದು:ಖಗಳೆರಡನ್ನು ಸಮಾನತೆಯಿಂದ ಸ್ವೀಕರಿಸಿದರೆ ಜೀವನ ಪರಿಪೂರ್ಣತೆ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ...... 

ಪ್ರೀತಿ

       ಪ್ರೀತಿ 

ಮೊಗ್ಗಾಗಿಯೇ ಉಳಿದಿರುವ ಪ್ರೀತಿ
ಇನ್ನೂ ಅರಳಬೇಕಿದೆ
ಮುಸ್ಸಂಜೆಯಲಿ ನೇಸರ ಇಳೆಗೆ ಅಪ್ಪಿದಾಗ
ಭಾವಗೀತೆಯೊಂದು ಮೋಡಿ
ರಾಗವಾಗಿ ಹರಿಯಬೇಕಿದೆ
ಸಾಗರದ ಅಂಚಲ್ಲಿ ನಿನ್ನ ಹೆಸರಿನೊಂದಿಗೆ
ನನ್ನ ಹೆಸರನು ಸೇರಿಸಿ ಬರೆಯಬೇಕಿದೆ
ಮನದಲಿ ಪ್ರೀತಿಯ ಖಾತೆಯೊಂದನು
ಜಂಟಿಯಾಗಿ ತೆರೆಯಲು ಬೆಟ್ಟದಷ್ಟು
ಪ್ರೀತಿ ಹೊತ್ತು ನೀ ಬರಬೇಕಿದೆ
ನನ್ನ ಮೌನದ ಹಿಂದಿರುವ ಪದಗಳನು ಹೆಕ್ಕಿ
ನನ್ನೆದೆಯಲಿ ನೀನು
ಕವಿತೆಯೊಂದನು ಬರೆಯಬೇಕಿದೆ....


          ಪ್ರಶ್ನೆ 

ಮನದ ಮೂಲೆಯಲಿ ನನ್ನದೇ
ಕಲರವ ಇದ್ದರೇನು ಸಾವಿರ
ನೀ ಬೊಗಸೆ ತುಂಬಿ ಕೊಟ್ಟ
ನೋವು ಮರೆಮಾಚುವುದೇ ಅಂತರ
ಅರ್ಥವಾಗದ ಪ್ರಶ್ನೆಯಾಗಿ ನೀನೇ ನನ್ನ ಕಾಡುತಿರುವಾಗ
ನಿನ್ನೀ ಪ್ರಶ್ನೆಗೆ ಹೇಗೆ ಕೊಡಲಿ ನಾ ಉತ್ತರ ????

Thursday 17 March 2016

ಬಾಲ್ಯವೆಂಬ ಸುಂದರ ಸ್ವಪ್ನ

                                         



ಅದೆಷ್ಟು ಚಂದ ಆ ದಿನಗಳು. ನೆನೆಸಿಕೊಂಡಾಗೆಲ್ಲ ಮೈ ಮನಸ್ಸು ಹುಚ್ಚೆದ್ದು ಕುಣಿಯಲಾರ೦ಭಿಸುತ್ತೆ.  ಮನೆಯ ಮುಂದೆ ಅಮ್ಮ ನೆಟ್ಟ ಸಾಲು ಸಾಲು ಹೂವಿನ ಗಿಡಗಳು, ಪಕ್ಕದಲ್ಲೇ ಪೇರಳೆ ಮರ, ಅಲ್ಲೇ ಕೆಳಗಡೆ ಹಚ್ಚ ಹಸುರಿನಿಂದ ಕಂಗೊಳಿಸುವ ತೋಟ, ಗದ್ದೆ.... ಅಮ್ಮನ ಪ್ರೀತಿಯ ಬೈಗುಳ, ಜೊತೆಗಾರರೊಂದಿಗೆ ಶಾಲೆಗೆ ಹೋಗುವ ಸಂಭ್ರಮ, ಅವರೊಂದಿಗಿನ ಸಣ್ಣ ಪುಟ್ಟ ಕಿತ್ತಾಟ, ಇವೆಲ್ಲ ಮತ್ತೆ ಬೇಕೆ೦ದರು ಸಿಗುವುದಿಲ್ಲ ಏಕೆ ?
ದೊಡ್ಡವಳಾದ೦ತೆಲ್ಲ  ಮತ್ತೆ ಬಾಲ್ಯಕ್ಕೆ ತೆರಳುವ ಅದಮ್ಯ ಆಸೆ ನನಗೆ... 

ಮೆಟ್ರೋ ಸಿಟಿಗೆ ಬಂದು ಅದೆಷ್ಟು ಕಾಲವಾದರೂ ಇಲ್ಲಿನ ಜನ, ಇಲ್ಲಿನ ವಾತಾವರಣ, ಎಂದಿಗೂ ನನ್ನದೆನಿಸಲೇ ಇಲ್ಲ. ಒಂಟಿಯಾಗಿರಲು ಇಷ್ಟಪಡುತ್ತಿದ್ದ ನನಗೆ, ಇಲ್ಲಿನ ಒಂಟಿತನ ಅಸಹನೀಯವೆನಿಸುತ್ತದೆ. 
ಮನಸು ಈಗ ಯಾವಾಗಲು ಬಯಸುವುದು ಅದೊಂದೇ.. ಅದೇ ಬಾಲ್ಯ... 

ಎಲ್ಲದರಲ್ಲೂ ಖುಷಿಯನ್ನೇ ಕಾಣುವ ಆ ಬಾಲ್ಯವೆಲ್ಲಿ, ಎಲ್ಲದರಲ್ಲೂ ಖುಷಿಯನ್ನು ಹುಡುಕುವ ಈ ಕಾಲವೆಲ್ಲಿ ? ಬಾಲ್ಯ ಎನ್ನುವುದು ಒಂದು ಸುಂದರ ಸ್ವಪ್ನದಂತೆ ಕಾಡಿಸುತ್ತದೆ. ಬಾಲ್ಯದ ಆಟ, ಪಾಠ, ಖುಷಿ, ನಗು, ಅಳು, ಎಲ್ಲವೂ ಖುಷಿಯನ್ನು ಬೊಗಸೆಗೆ ತುಂಬಿ ತುಂಬಿ ಕೊಡುತ್ತದೆ. 

ಸೋನೆ ಮಳೆಯಲ್ಲಿ ಮಿಂದೆದ್ದು ಮುತ್ತಿನಂತೆ ಹೊಳೆದು ನೀರಿನ ಹನಿಗಳಿಂದ ಕಂಗೊಳಿಸುತ್ತಿರುವ ಹಚ್ಚ ಹಸುರಿನ ತೋರಣ. ಬಿಸಿಲಿನ ಧಗೆಗೆ ಕೆಂಡದಂತೆ ಕಾದಿರುವ ಇಳೆಗೆ ಮಳೆ ಬಂದು ಅಪ್ಪಿದಾಗ ಹೊರಹೊಮ್ಮುವ ಆ ಕಂಪು... ಆಹಾ !!! ಅದನ್ನೆಲ್ಲಾ ಈ ಕಾಂಕ್ರೀಟ್ ಸಿಟಿಯಲ್ಲಿ ಎಲ್ಲಿ ಹುಡುಕಲಿ ? ಅಪ್ಪನ ಬೈಗುಳ, ಅಮ್ಮನೊಂದಿಗಿನ ಹುಸಿಮುನಿಸು, ಅದನ್ನು ತಣಿಸಲು ಅಮ್ಮ ನೀಡುವ ಕೈತುತ್ತು, ತಂಗಿಯೊಂದಿಗಿನ ಜಗಳ, ಇವನ್ನೆಲ್ಲ ಪಕ್ಕದ ಅಪಾರ್ಟ್ಮೆಂಟ್ನಲ್ಲಿ ಯಾರಿದ್ದರೆಂದೇ ತಿಳಿಯದ ಈ ಅಪರಿಚಿತ ಊರಿನಲ್ಲಿ ಹೇಗೆ ಹುಡುಕಲಿ ? ಸಂಜೆಯಾಗುತ್ತಿದ್ದಂತೆ ಮನೆಯ ಮುಂದೆ ಹಾರಿ ಬರುವ ಚಿಟ್ಟೆಯನ್ನು ಕಷ್ಟವಾದರೂ ಇಷ್ಟಪಟ್ಟು ಹಿಡಿದದ್ದು, ಚಿನ್ನಿ-ದಾಂಡು ಆಟದಲ್ಲಿ ಮೋಸ ಮಾಡಿ ಅರ್ಧದಲ್ಲೇ ಆಟ ಬಿಟ್ಟು ಹೋಗಿದ್ದು, ಪಕ್ಕದಮನೆಯವರ ತೋಟಕ್ಕೆ ನುಗ್ಗಿ ಮಾವಿನಕಾಯಿ ಬಡಿದು ಉಪ್ಪಿನೊಂದಿಗೆ ತಿನ್ನುತ್ತಿರುವಾಗ ಅವರಿಗೆ ಸಿಕ್ಕುಬಿದ್ದಿದ್ದು, ಇಂತಹ ಮೋಜಿನ ಕ್ಷಣಗಳನ್ನು ಈ ಬ್ಯುಸಿ ಸಿಟಿಯಲ್ಲಿ ನಾ ಹೇಗೆ, ಎಲ್ಲಿ ಹುಡುಕಲಿ ? ಯಾವಾಗೆಂದರೆ ಆವಾಗ ಕಾಡುವ ಈ ಬಾಲ್ಯದ ನೆನಪುಗಳನ್ನು ಎಲ್ಲಿ ತು೦ಬಿಸಿಡಲಿ ?

ಮನಸಿನಲ್ಲಿ ಒಳಗೊಂದು ಹೊರಗೊಂದು ಇದ್ದು, ಎದುರಿಗೆ ಕೃತಕ ನಗೆಯ ಮುಖವಾದ ಧರಿಸಿ ಬಾಳುವ ಈ ಬದುಕು ಬೇಸರ ತರಿಸಿದೆ. 
ಬಾಲ್ಯದ ದಿನಗಳು ಮತ್ತೆಂದೂ ಬರಲಾರದೆ೦ಬ ಕಟುಸತ್ಯ ತಿಳಿದಿದ್ದರೂ ಸಹ ಬಾಲ್ಯವೆಂಬ ಸುಂದರ ಸ್ವಪ್ನದ ನಿರೀಕ್ಷೆಯಲ್ಲಿ .........  

Wednesday 16 March 2016

ಬದುಕು

ಬದುಕು 


ಜಿಟಿಪಿಟಿ ಮಳೆಯಲಿ
ಈ ತೀರದ ಮಣ್ಣಿನ
ಗಂಧವನ್ನು ಆಘ್ರಾಣಿಸಿ
ಕೋಟಿ ಬಣ್ಣದ ಕಲ್ಪನೆಯಲ್ಲಿ
ಕವಿತೆ ಒಂದನ್ನು ಕಟ್ಟಿ
ಹಾಡದೆ ಅದೆಷ್ಟು ಕಾಲವಾಯಿತು ?

ನೀನಿಲ್ಲದೆ ಈ ತೀರ ಮೌನವಾಗಿತ್ತು
ಈಗಷ್ಟೇ ಮನದ ವಿಸ್ಮಯ
ಲೋಕದ ಬಾಗಿಲು ತೆರೆದು
ನಿನ್ನ ನೆನಪಿನರಮನೆಗೆ ಅಡಿಯಿಡುತ್ತಿರುವೆ
ನನ್ನಲ್ಲಿ ಬಣ್ಣದ ಕಾರ೦ಜಿಯನು ಮೂಡಿಸುತಿವೆ
ನಿನ್ನೀ ನೆನಪುಗಳು

ಒಂದು ಚೂರು ಒಲವು
ಒಂದು ಹಿತವಾದ ಕವಿತೆ
ಬದುಕು ಇನ್ನೂ ಅರಳಬೇಕಿದೆ
ಕಣ್ಣುಗಳಲ್ಲಿ ಮಿಂಚಿನ ಹಾಡು ಗುನುಗಬೇಕಿದೆ
ರಾಗ ಹರಿಯಬೇಕಿದೆ ಸರಾಗವಾಗಿ
ನದಿಯಾಗಿ, ಮತ್ತೆ ಬದುಕಾಗಿ
ಹೌದು, ಬದುಕಾಗಿ.......  

Tuesday 15 March 2016

ಹನಿಗವನಗಳು

   ಹನಿಗವನಗಳು 

           ನಸುಕು 

ನಸುಕಿನ ಹನಿ ಮಂಜಿನ ನಡುವೆ, 
ಪಕ್ಷಿಗಳ ಕಲರವ ಕೇಳಿ 
ಬಾನಂಚಲ್ಲಿ ನೇಸರನು ಬೆಳಕ ಪಸರಿಸಿ 
ಇಬ್ಬನಿಯ ಕರಗಿಸಲು 
ತಂಪಾದ ತಿಳಿಗಾಳಿ ಮೋಡಿ 
ಮನದಲಿ ಹರುಷ ತುಂಬಿದೆ 
ಅರೆಮ೦ಪರಿನಲ್ಲಿರುವ ಕ೦ಗಳು 
ಇನ್ನೊಂದು ಶುಭದಿನದ 
ಸ್ವಾಗತಕ್ಕೆ ಸಜ್ಜಾಗಿದೆ...   


          ಅಗಲಿಕೆ 

ಅದೊಂದು ಸುಂದರ ಸಂಜೆಯಲಿ 
ಶಾಂತವಾಗಿರುವ ನದಿಯು 
ಅವರ ಅಗಲಿಕೆಗೆ ಸಾಕ್ಷಿಯಾಯಿತು... 
ಅವಳಿಗೆ ವಿದಾಯ ಹೇಳಿದ ಅವನು 
ತಿರುಗಿಯೂ ನೋಡದೆ ಹೊರಟೇ ಹೋದ 
ಅವಳು ಮೌನಿಯಾದಳು 
ಅವಳ ಮೌನದಲಿ ಕಾಡುವ ಕವಿತೆಯಾಗಿ 
ಅವನು ಕನಸಾಗಿಯೇ ಉಳಿದುಹೋದ... 


          ಬೆಳಕು

ಬೇಸರದಿ ಒಂಟಿಯಾಗಿ ಕುಳಿತವಳಿಗೆ 
ಇರುಳಿನಲ್ಲಿ ಕಂಡಿತೊಂದು ಬೆಳಕು 
ಸನಿಹ ಹೋಗಿ ನೋಡಿದರೆ ಎಲ್ಲ ಮಸುಕು ಮಸುಕು... 
ಬೆಳಕೇ ಇರದ ಬಾಳಿನಲ್ಲಿ 
ಎಂದು ಬರುವುದೋ ಬೆಳಕು... 


         ಬಿಂಬ 

ಸುರಿವ ಮಳೆಯ ಒಂದೊಂದು 
ಹನಿಗಳಲಿ ಕಂಡೆ ನಿನ್ನ ಬಿಂಬ 
ಮಳೆ ನಿಂತ ಮೇಲೆ ನಿನ್ನ ಕಣ್ಣಲ್ಲಿ 
ಕಂಡೆ ನನ್ನದೇ ಪ್ರತಿಬಿಂಬ...