Monday 28 March 2016

ಸಪ್ತಸಾಗರದಾಚೆಯೆಲ್ಲೋ....

ತನ್ನವರೆನ್ನುವವರು ಯಾರೂ ಇಲ್ಲದ ಅಪರಿಚಿತ ಅಮೇರಿಕಾಗೆ ಪ್ರಕೃತಿ ಬಂದು ಐದು ವರ್ಷ... ಅವಳ ಮನಸೆಲ್ಲಾ ಖಾಲಿ ಖಾಲಿಯಾಗಿತ್ತು. ಮುಸ್ಸಂಜೆಯಲಿ ರವಿ ಶಶಿಯಾಗಮನಕ್ಕಾಗಿ ಹಾದಿ ತೆರವುಗೊಳಿಸುತ್ತಾ ನೆರಳ ತರಿಸುತಲಿದ್ದ. ರವಿಯ ಹೊಂಬಣ್ಣದ ಕಿರಣಗಳು ಸಾಗರವನ್ನು ತೋಯಿಸುತ್ತಿರುವುದನ್ನು ಕಿಟಕಿಯಿಂದಲೇ ನೋಡುತ್ತಿದ್ದ ಪ್ರಕೃತಿ ಮೌನಿಯಾದಳು.. 
ಪ್ರಕೃತಿ ಹೆಸರಿಗೆ ತಕ್ಕಂತೆ ಪ್ರಕೃತಿ ಪ್ರೇಮಿ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಮಲೆನಾಡಿನ ಸುಂದರ ಪ್ರಕೃತಿಯ ಒಂದು ಪುಟ್ಟ ಹಳ್ಳಿಯಲ್ಲಿ ಡಾಕ್ಟರ್ ಆಗಿ ಅಲ್ಲಿ ಜನರ ಕ್ಷೇಮ ನೋಡಿಕೊಂಡು ಹಚ್ಚ ಹಸುರಿನ ಮಧ್ಯೆ ಗುಲಾಬಿಯಂತೆ ಕಂಗೊಳಿಸಬೇಕಿತ್ತು...

ಪ್ರಕೃತಿಗೆ ಚಿಕ್ಕಂದಿನಿಂದಲೂ ಡಾಕ್ಟರ್ ಆಗಿ ಅವರ ಹಳ್ಳಿಯಲ್ಲಿ ಇಲ್ಲದಿರುವ ವೈದ್ಯಕೀಯ ಸೌಲಭ್ಯವನ್ನು ತಾನೇ ನೀಗಿಸಬೇಕೆಂಬ ಆಸೆ.. ಜಿಟಿಪಿಟಿ ಸೋನೆ ಮಳೆ ಬಂತೆಂದರೆ ಸಾಕು ಮನೆಯಲ್ಲಿ ಕಾಲೇ ನಿಲ್ಲುತ್ತಿರಲಿಲ್ಲ. ಪ್ರಕೃತಿಯ ಪ್ರತಿಯೊಂದು ಆಗುಹೋಗುಗಳಿಗೂ ಪ್ರತಿಕ್ರಿಯಿಸುವ ಸಂವೇದನಶೀಲೆ.. ಅವಳ ಯಾವುದೇ ಆಸೆಗೂ ಅಡ್ಡಿ ಬರದೆ ಅವಳಿಷ್ಟದಂತೆ ಎಲ್ಲವನ್ನೂ ಬೆಂಬಲಿಸುವ ಅಪ್ಪ-ಅಮ್ಮ..

ಹಳ್ಳಿಯಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಪಟ್ಟ ಕಾಲೇಜು ಇಲ್ಲದ ಕಾರಣ ಅನಿವಾರ್ಯವಾಗಿ ಪ್ರಕೃತಿ ಬೆಂಗಳೂರಿಗೆ ಬಂದಳು. ಅಪ್ಪ-ಅಮ್ಮನ ಮುದ್ದಿನ ಕೂಸಾಗಿ ಹಕ್ಕಿಯಂತೆ ಸ್ವಚ್ಛಂದವಾಗಿ ಬದುಕಿದ ಪ್ರಕೃತಿಗೆ ಬೆಂಗಳೂರಿಗೆ ಒಗ್ಗಿಕೊಒಗ್ಗಿಕೊಳ್ಳುವುದು ಕಷ್ಟವಾಗಿತ್ತು. ಪರಿಚಯವಿಲ್ಲದ ಊರು ತರುವ ಒಂಟಿತನ, ಇಂಗ್ಲೀಷ್ ಮಾಧ್ಯಮಕ್ಕೆ ಹೊಂದಿಕೊಳ್ಳುವ ಕಷ್ಟ ಇದಕ್ಕೆಲ್ಲ ಜೊತೆಯಾಗಿದ್ದು ಆಕಸ್ಮಿಕವಾಗಿ ಪರಿಚಯವಾದ ರವಿ... ಪರಿಚಯ ಸ್ನೇಹವಾಗಲು, ಸ್ನೇಹ ಪ್ರೀತಿಯಾಗಲು ಹೆಚ್ಚೇನು ದಿನ ಬೇಕಾಗಲಿಲ್ಲ.. ಇಬ್ಬರ ಮನೆಯಲ್ಲೂ ತಿಳಸಿ ಎಲ್ಲರ ಒಪ್ಪಿಗೆಯೊಂದಿಗೆ ಮದುವೆಯೂ ಕೂಡ ಕಣ್ರೆಪ್ಪೆ ಮುಚ್ಚಿ ತೆಗೆಯುವುದರೊಳಗೆ ಮುಗಿದೇಹೋಗಿತ್ತು. ಪ್ರಕೃತಿಯ ವಿದ್ಯಾಭ್ಯಾಸವೂ ಅಪೂರ್ಣವಾಯಿತು...

ಅಷ್ಟರಲ್ಲಿ ಅಮೇರಿಕಾದ ಪ್ರತಿಷ್ಠಿತ ಕಂಪನಿಯ ಮಾಲಿಕನಾದ ರವಿಯ ತಂದೆ ಹೃದಯಾಘಾತವಾಗಿ ಮರಣಹೊಂದಿದ್ದರಿಂದ ಎಲ್ಲಾ ಜವಾಬ್ದಾರಿಯೂ ರವಿಯ ಹೆಗಲಿಗೇ ಬಿತ್ತು. ರವಿಯ ಪ್ರೀತಿಯ ಮಳೆಯಲ್ಲಿ ನೆನೆಯುತ್ತಿದ್ದವಳಿಗೆ ತನ್ನಾಸೆ, ಕನಸುಗಳ ಪರಿವೇ ಇದ್ದಂತಿರಲಿಲ್ಲ. ರವಿಯಲ್ಲಿಯೇ ತನ್ನ ಖುಶಿ ಕಾಣುತ್ತಿದ್ದವಳು ತನ್ನಾಸೆ ಕನಸನ್ನ ಅಡಿಗೆ ಹಾಕಿ ರವಿಯೊಂದಿಗೆ ಅಮೇರಿಕಾಗೆ ಹಾರಿದಳು..
ಎಲ್ಲವೂ ಚೆನ್ನಾಗೇ ಇತ್ತು... ಬಯಸಿ ಬಯಸಿ ಪಡೆದ ಪ್ರೀತಿಯ ಇನಿಯನ ಸಾನಿಧ್ಯ, ಹೊಸ ಊರು, ಹೊಸ ಜಾಗ. ಬರುಬರುತ್ತಾ ರವಿ ಕೆಲಸದಲ್ಲಿ ತೊಡಗಿದಾಗ ಒಂಟಿತನ, ಅಸಹನೀಯತೆ ಭುಗಿಲೇಳಲಾರಂಭಿಸಿತು. ಮುದುಡಿಹೋಗಿದ್ದ ಆಸೆ, ಕನಸುಗಳೆಲ್ಲ ಪ್ರಕೃತಿಯ ಮನದಲ್ಲೇ ಅರಳಲಾರಂಭಿಸಿತ್ತು. ಆದರೆ ಅದನ್ನು ಹೊಸಕಿ ಹಾಕುತ್ತಲೇ ಕಾಲ ಕಳೆದಿದ್ದಳು..

ಕಿಟಕಿಯೀಚೆಗೆ ಕುಳಿತು ರವಿ ಮರೆಯಾಗುವುದನ್ನೇ ನೋಡುತ್ತಿದ್ದ ಪ್ರಕೃತಿಯ ಮೌನವಾಗಿದ್ದ ಮನದಲ್ಲಿ ಸಾವಿರಾರು ಪ್ರಶ್ನೆಗಳ ಸರಮಾಲೆಗಳ ಮೆರವಣಿಗೆಯಾಗತೊಡಗಿತ್ತು. ಈ ಐದು ವರ್ಷಗಳ ದೀರ್ಘಾವಧಿಯಲ್ಲಿ ನಾನು ಸಾಧಿಸಿದ್ದಾದರೂ ಏನು ? ರವಿಯ ಪ್ರೀತಿಯಿಂದಲೂ ನನ್ನ ಕನಸನ್ನು ಮರೆಸಲು ಆಗಿಲ್ಲವೇಕೆ ? ನನ್ನೆಲ್ಲಾ ಆಸೆ ಕನಸುಗಳು ಮೊಗ್ಗಾಗಿದ್ದಾಗಲೇ ಕಮರಿ ಹೋಗಿದ್ದೇಕೆ ? 
ಇಲ್ಲ.... ಇದಕ್ಕೆಲ್ಲ ಒಂದು ಅಂತ್ಯ ಹುಡುಕಲೇಬೇಕೆಂದು ಮನ ನಿರ್ಧರಿಸಿಬಿಟ್ಟಿತ್ತು. ಹುಟ್ಟಿದ ಮನೆ, ಪರಿಸರ, ಜೀವನದ ಆಸೆ, ಆಕಾಂಕ್ಷೆ ಕೈ ಬೀಸಿ ಕರೆಯತೊಡಗಿತ್ತು.....
ತನ್ನ ಮನದಾಳದ ಮಾತುಗಳನ್ನು ರವಿಯ ಜೊತೆ ಹೇಳಲೇಬೇಕೇಂದು ರೂಮಿನಿಂದ ಹೊರಹೋಗಲು ಹೆಜ್ಜೆ ಹಾಕಿದಳು....
ತನ್ನ ಇನಿಯೆಯಾಗಮನಕ್ಕಾಗಿ ಹಾದಿ ತೆರವುಗೊಳಿಸುತ್ತಿದ್ದ ರವಿ ಹೊಂಬಣ್ಣದಿಂದ ಮಿನುಗುತ್ತಿದ್ದ ರೂಮನ್ನು ಕರಿಯ ನೆರಳಲಿ ಮೀಯುವಂತೆ ಮಾಡಿ ಮರೆಯಾದ...
ಅದೇ ಕ್ಷಣ ಪ್ರಕೃತಿಯ ಫೋನು ರಿಂಗಣಿಸುತ್ತಿತ್ತು....
 "ಸಪ್ತ ಸಾಗರದಾಚೆಯೆಲ್ಲೋ


   ಸುಪ್ತ ಸಾಗರ ಕಾದಿದೆ....!!!"

No comments:

Post a Comment